ಕೈಕಂಬ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ| ಗಾಯಾಳು ಆಸ್ಪತ್ರೆಯಲ್ಲಿ ಸಾವು

ಸುಬ್ರಹ್ಮಣ್ಯ: ಸ್ವಿಫ್ಟ್‌ ಕಾರಿಗೆ ಇನ್ನೋವಾ ಕಾರು ಢಿಕ್ಕಿಯಾದ ಪರಿಣಾಮ ಓರ್ವರು ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೈಕಂಬ-ಗೋಪಾಳಿ ಎಂಬಲ್ಲಿ ಮೇ 6ರಂದು ಸಂಭವಿಸಿದೆ.

ಬೆಂಗಳೂರು ರಾಮನಗರದ ಯಲ್ಲಿಗಯ್ಯ (73) ಮೃತರು. ಯಲ್ಲಿಗಯ್ಯ ಅವರ ಪುತ್ರ ಕಾರನ್ನು ಚಲಾಯಿಸುತ್ತಿದ್ದ ನವೀನ್‌ (29) ಮತ್ತು ನವೀನ್‌ ತಾಯಿ ದೈಯಮ್ಮ (52) ಗಾಯಗೊಂಡವರು.

ಮೇ 6ರಂದು ಸಂಜೆ ಗೋಪಾಳಿ ಎಂಬಲ್ಲಿ ಇನ್ನೋವಾ ಕಾರು ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್‌ ಕಾರಿಗೆ ಢಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್‌ ಕಾರು ಪಲ್ಟಿಯಾಗಿತ್ತು. ಸ್ವಿಫ್ಟ್‌ ಕಾರಿನಲ್ಲಿದ್ದವರು ಕುಕ್ಕೆ ದೇವಸ್ಥಾನಕ್ಕೆ ಬಂದು ಊರಿಗೆ ಹಿಂದಿರುಗುತ್ತಿದ್ದರು.

ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತಿಬ್ಬರನ್ನು ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಕಡಬ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಯಲ್ಲಿಗಯ್ಯ ಅವರು ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟರು. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.