ಕನಕಮಜಲು: ಕಟ್ಟಡ ಬಾಡಿಗೆ ಕೇಳಿದ್ದಕ್ಕೆ ಹಲ್ಲೆ; ದೂರು ದಾಖಲು

ಜಾಲ್ಸೂರು: ಬಾಡಿಗೆ ಪಾವತಿಸುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಯ ಠಾಣೆಗೆ ದೂರು ನೀಡಿದ ಘಟನೆ ಕನಕಮಜಲು ಎಂಬಲ್ಲಿಂದ ವರದಿಯಾಗಿದೆ.

ಕನಕಮಜಲು ಗ್ರಾಮದ ಅಬ್ದುಲ್‌ ಲತೀಫ್‌ ಹಲ್ಲೆಗೊಳಗಾದವರು. ಅವರು ಸುಳ್ಯದ ಎಪಿಎಂಸಿಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಕನಕಮಜಲಿನ ಸುಣ್ಣಮೂಲೆಯಲ್ಲಿ ಒಂದು ವಾಣಿಜ್ಯ ಕಟ್ಟಡ ಹೊಂದಿದ್ದರು. ಅದರಲ್ಲಿ ಒಂದು ಅಂಗಡಿಯನ್ನು ಅಬ್ದುಲ್‌ ಅವರಿಗೆ ಬಾಡಿಗೆ ನೀಡಿದ್ದು, ಅಬ್ದುಲ್‌ ಸರಿಯಾಗಿ ಬಾಡಿಗೆ ಪಾವತಿಸುತ್ತಿರಲಿಲ್ಲ.

ಫೆ. 12ರಂದು ಸಂಜೆ ಅಂಗಡಿ ಬಳಿಗೆ ಹೋಗಿ ಅಬ್ದುಲ್‌ ಅವರಿಗೆ ತಿಂಗಳಿಗೆ ಸರಿಯಾಗಿ ಬಾಡಿಗೆ ಪಾವತಿಸುವಂತೆ ಕೇಳಿದಾಗ, ಅಂಗಡಿಯಲ್ಲಿದ್ದ ಅಬ್ದುಲ್‌ ಅವರ ಮಕ್ಕಳಾದ ಬಾತಿಶಾ ಮತ್ತು ಹಫೀಶ್‌ ಅವಾಚ್ಯವಾಗಿ ಬೈದು ನಾವು ಬಾಡಿಗೆ ಹಣವನ್ನು ಕೊಡುವುದಿಲ್ಲ, ನಾವು ಕೊಟ್ಟಾಗ ನೀವು ತೆಗೆದುಕೊಳ್ಳಬೇಕು ಎಂದು ಉಡಾಫೆಯಿಂದ ಮಾತನಾಡಿ ಬಳಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.