ಸುಬ್ರಹ್ಮಣ್ಯ: ಕುಲಕುಂದ ಶಿವರಾಯ(ನಿರಂಜನ)ರ ಜನ್ಮಶತಮಾನೋತ್ಸವದ ಅಂಗವಾಗಿ ‘ನಿರಂಜನ: ಬದುಕು-ಬರಹ’ ವಿಷಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿ ವಿಚಾರ ಸಂಕಿರಣ ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಕಾಲೇಜಿನ ‘ಭಾಷಾ ಸಂಘ’ವು ‘ಜಲಶ್ರೀ ಪ್ರತಿಷ್ಠಾನ ಕಡ್ಲಾರು’ ಇದರ ಸಹಯೋಗದೊಂದಿಗೆ ವಿಚಾರ ಸಂಕಿರಣವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿತ್ತು. ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ವಹಿಸಿದ್ದರು.
ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿ ಗಣರಾಜ ಕುಂಬಳೆ ವಿಶ್ರಾಂತ ಪ್ರಾಂಶುಪಾಲರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯ ರಾಮಕುಂಜ ಇವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ಹೃತೀಶ್ ಪ್ರಾರ್ಥಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಭಾಷಾ ಸಂಘದ ಸಂಯೋಜಕ ಉದಯಕುಮಾರ್ ವಿಚಾರ ಸಂಕಿರಣದ ಪ್ರಸ್ತಾವನೆಗೈದು ಸ್ವಾಗತಿಸಿ, ‘ಜಲಶ್ರೀ ಪ್ರತಿಷ್ಠಾನ ಕಡ್ಲಾರು’ ಇದರ ಅಧ್ಯಕ್ಷ ನಿರಂಜನ ವಂದಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಲತಾ.ಬಿ.ಟಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಕು.ಸಂಖ್ಯಾ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣರಾಜ ಕುಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಒಟ್ಟು 16 ವಿದ್ಯಾರ್ಥಿಗಳು ನಿರಂಜನರ ಪ್ರಮುಖ ಕೃತಿಗಳ ಕುರಿತು ಪ್ರಬಂಧ ಮಂಡಿಸಿದರು. ವಿಚಾರ ಸಂಕಿರಣದ ಕೊನೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬಗ್ಗೆ ಹೊಂದಿರುವ ಒಲವು ಮತ್ತು ಅಚ್ಚಕನ್ನಡದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿರುವುದನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಸಾಹಿತ್ಯ ಓದು ಮತ್ತು ವಿಮರ್ಶೆ ಸ್ವ ಪ್ರಯತ್ನದಿಂದ ನಡೆಸಬೇಕೆಂದು ತಿಳಿಸಿದರು. ವಿಚಾರ ಸಂಕಿರಣದ ಕೊನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕನ್ನಡ ವಿಭಾಗದ ಉಪನ್ಯಾಸಕಿ ಸುಮಿತ್ರಾ ಕುಮಾರಿ ಧನ್ಯವಾದ ಸಮರ್ಪಿಸಿದರು.
ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಸೃಜನ್ ಮುಂಡೋಡಿ, ಆಂಗ್ಲಭಾಷಾ ಉಪನ್ಯಾಸಕರಾದ ವನಿತಾ, ದಿವ್ಯಾ, ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ರಾಮ್ ಪ್ರಸಾದ್, ಹಿಂದಿ ಭಾಷಾ ವಿಭಾಗದ ಮುಖ್ಯಸ್ಥೆ ಭಕ್ತಿಶ್ರೀ, ವಿಚಾರ ಸಂಕಿರಣದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ದ್ವಿತೀಯ ಬಿಕಾಂ (ಎ) ತರಗತಿಯ ವಿದ್ಯಾರ್ಥಿಗಳು ನಿರ್ವಹಿಸಿದರು.