ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಗೋಡೌನ್ ಒಂದರಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 12 ಕ್ವಿಂಟಾಲ್ ಅಡಕೆ ಕಳವಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಾವರದ ಮಹಮ್ಮದ್ ರಫೀಕ್ ಎಸ್.ಡಿ. ಅವರು ತಮ್ಮ ಜಮೀನಿನಲ್ಲಿ ಬೆಳೆದ ಅಡಕೆಗಳನ್ನು ಬಯಂಬು ಭಾಸ್ಕರ ರಾವ್ ಎಂಬವರ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ದಾಸ್ತಾನು ಮಾಡುತ್ತಿದ್ದು, ಇತ್ತೀಚೆಗೆ ದಾಸ್ತಾನು ಇಟ್ಟಿರುವ ಅಡಕೆಗಳನ್ನು ಸುಲಿದು ಗೋಣಿ ಚೀಲದಲ್ಲಿ ಕಟ್ಟಿ ದಾಸ್ತಾನು ಇರಿಸಿದ್ದರು. ರಫೀಕ್ ಅವರು ಕಾಸರಗೋಡು ಮನೆಗೆ ಹೋಗಿದ್ದು ಸೆ.12ರ ರಾತ್ರಿ 3 ಗಂಟೆಗೆ ಮನೆಯ ಜೀಪು ಡ್ರೈವರ್ ಹಸೈನಾರ್ ಅವರು ರಫೀಕ್ ಅವರಿಗೆ ಫೋನ್ ಮಾಡಿ ಗೋಡಾನ್ನಿಂದ ಯಾರೋ ಕಳ್ಳರು ಅಡಕೆ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ರಫೀಕ್ ಅವರ ತಂದೆಯವರು ಮನೆಯಿಂದ ಹೊರಗೆ ಬಂದು ನೋಡಿದಾಗ ವಾಹನದಲ್ಲಿ ಅಲ್ಲಿಂದ ಕಳ್ಳರು ಪರಾರಿಯಾಗಿದ್ದಾರೆ. ರಫೀಕ್ ಅವರು ಕೂಡಲೇ ಕಾಸರಗೋಡಿನಿಂದ ಹೊರಟು ಅಜ್ಜಾವರಕ್ಕೆ ಬಂದು ಅಡಕೆ ದಾಸ್ತಾನು ಇರಿಸಿದ್ದ ಗೋಡಾನ್ ತೆರೆದು ನೋಡಿದಾಗ ದಾಸ್ತಾನು ಇರಿಸಿದ್ದ ಸುಮಾರು 33 ಕ್ವಿಂಟಾಲ್ ಅಡಕೆ ಪೈಕಿ 12 ಕ್ವಿಂಟಾಲ್ ಅಡಕೆ ಕಡಿಮೆ ಇರುವುದು ಕಂಡು ಬಂದಿದೆ. ದಾಸ್ತಾನು ಕೊಠಡಿಯ ಬಾಗಿಲನ್ನು ದೂಡಿ ಒಳ ಪ್ರವೇಶಿಸಿ ಕಳವು ಮಾಡಲಾಗಿದ್ದು, ಕಳ್ಳತನವಾಗಿರುವ ಅಡಕೆಯ ಅಂದಾಜು ಬೆಲೆ ರೂ. 5,00,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.