ನಿವೃತ್ತಿ ಹೊಂದಿದ ಪಿಡಿಒಗೆ ಮೆರವಣಿಗೆ ಮೂಲಕ ವಿದಾಯ ಹೇಳಿದ ಗ್ರಾಮಸ್ಥರು

ಬೆಳ್ಳಾರೆ: ತನ್ನ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ರಹಿತವಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರು ತೆರದ ಜೀಪಿನಲ್ಲಿ 11 ಕಿ.ಮೀ. ದೂರದ ಅವರ ಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಶಿಷ್ಟ ರೀತಿಯಲ್ಲಿ ಬೀಳ್ಕೊಟ್ಟ ಅಪರೂಪದ ಘಟನೆ ನಡೆದಿದೆ.

ಪೆರುವಾಜೆ ಗ್ರಾಮದ ಪಿಡಿಒ ಜಯಪ್ರಕಾಶ್‌ ಅಲೆಕ್ಕಾಡಿ. ಮಾ. 29ರಂದು ಸೇವಾ ನಿವೃತ್ತಿಯ ಪ್ರಯುಕ್ತ ನಡೆದ ಬೀಳ್ಕೊಡುಗೆ ಗಮನ ಸೆಳೆಯಿತು. ಭಷ್ಟಾಚಾರ ರಹಿತ ಸೇವೆಗಾಗಿ ಗ್ರಾಮಸ್ಥರು ತೋರಿದ ಅಕ್ಕರೆಯ ಪ್ರೀತಿಗೆ ಅಧಿಕಾರಿಯ ಕಣ್ಣಿಂಚಿನಲ್ಲಿ ಆನಂದ ಭಾಷ್ಪ ಜಿನುಗಿತು.

ಸುಳ್ಯ ಮುರುಳ್ಯ ಗ್ರಾಮದ ಅಲೆಕ್ಕಾಡಿ ನಿವಾಸಿ ಜಯಪ್ರಕಾಶ್‌ ಅವರು 1998ರಲ್ಲಿ ಎಣ್ಮೂರು ಮಂಡಲ ಪಂಚಾಯತ್‌ನಲ್ಲಿ ಕಚೇರಿ ಗುಮಾಸ್ತರಾಗಿ ಸೇವೆ ಆರಂಭಿಸಿದರು. ಅನಂತರ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗ್ರೇಡ್‌ 2 ಕಾರ್ಯದರ್ಶಿಯಾಗಿ, ಗ್ರೇಡ್‌ 1 ಕಾರ್ಯದರ್ಶಿಯಾಗಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾ.ಪಂ.ನಲ್ಲಿ, ಪ್ರಭಾರ ಕಾರ್ಯದಶಿಯಾಗಿ ಬೆಳಂದೂರು, ಬಿಳಿನೆಲೆ ಗ್ರಾ.ಪಂ.ನಲ್ಲಿ ಸೇವೆ ಸಲ್ಲಿಸಿ 2018ರಂದು ಪೆರುವಾಜೆ ಗ್ರಾ.ಪಂ. ಪಂಚಾಯತ್‌ನಲ್ಲಿ ಕರ್ತವ್ಯ ಮುಂದುವರಿಸಿ 2025 ಮಾ. 29ರಂದು ನಿವೃತ್ತಿ ಹೊಂದಿದ್ದಾರೆ. ತನ್ನ ಒಟ್ಟು ಸೇವಾವಧಿಯಲ್ಲಿ ಪ್ರಾಮಾಣಿಕ ಸೇವೆಯಿಂದ ಗುರುತಿಸಿಕೊಂಡು ತಾಲೂಕಿನ ಲಂಚ ರಹಿತ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಪೆರುವಾಜೆಯಿಂದ 11 ಕಿ.ಮೀ. ದೂರದಲ್ಲಿ ಇರುವ ಅವರ ಮನೆಗೆ ತೆರದ ಜೀಪಿನಲ್ಲಿ ಪಿಡಿಒ ಅವರನ್ನು ಕರೆದುಕೊಂಡು ಹೋಗಲಾಯಿತು. ಅಲಂಕೃತ ತೆರೆದ ಜೀಪಿನಲ್ಲಿ ಪಿಡಿಒ ಸಹಿತವಾಗಿ ಗ್ರಾ.ಪಂ. ಜನಪ್ರತಿನಿಧಿಗಳು ಆಸೀನರಾದರೆ, ಗ್ರಾಮಸ್ಥರು ಹತ್ತಾರು ವಾಹನಗಳಲ್ಲಿ ಅವರನ್ನು ಹಿಂಬಾಲಿಸಿದರು. ಪೆರುವಾಜೆಯಿಂದ ಬೆಳ್ಳಾರೆಯ ಮುಖ್ಯ ರಸ್ತೆಯ ಮೂಲಕ ಸಾಗಿ ನಿಂತಿಕಲ್ಲು ಮಾರ್ಗವಾಗಿ ಮುರುಳ್ಯಕ್ಕೆ ತಲುಪಿ ಅಲ್ಲಿಂದ ಅಲೆಕ್ಕಾಡಿಯ ಅವರ ಮನೆಗೆ ಕರೆದುಕೊಂಡು ವಿಶೇಷ ರೀತಿಯಲ್ಲಿ ಬೀಳೊYಡಲಾಯಿತು. ಮೆರವಣಿಗೆಯ ಹಾದಿಯಲ್ಲಿ ಪಿಡಿಒ ಅವರನ್ನು ಜನರು ಹಾರ ಹಾಕಿ ಗೌರವಿಸಿದರೆ, ಮನೆಗೆ ತಲುಪಿದಾಗ ಮನೆ ಮಂದಿ ಆರತಿ ಬೆಳಗಿ ಬರಮಾಡಿಕೊಂಡರು.