ನಡುಗಲ್ಲು ನ.14: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪೂರ್ವಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ‘ಎಸ್ ಡಿಎಂಸಿ ಅಧ್ಯಕ್ಷ ಶಿವರಾಮ ಉತ್ರಂಬೆ ವಹಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ, ಭಾಷಣದ ಬಳಿಕ ಹೊಂಬೆಳಕು ತಂಡದ ಗೌರವಾಧ್ಯಕ್ಷ ಉದಯಕುಮಾರ್ ದೇರಪಜ್ಜನ ಮನೆ ಮಾತನಾಡಿ ಶಾಲೆ ಬೆಳೆದು ಬಂದ ದಾರಿ, ತಮ್ಮ ಮನೆತನದವರು ನೀಡಿದ ಕೊಡುಗೆ ಬಗ್ಗೆ ಸ್ಮರಿಸಿದರು.
ನಾಲ್ಕೂರ್ ಹೊಂಬೆಳಕು ಬಳಗ ವತಿಯಿಂದ ‘ಸ್ವಚ್ಛ ಪರಿಸರ ‘ ವಿಷಯವಾಗಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಚಿತ್ರ ಬರೆಯುವ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ‘ ಪ್ರಬಂಧ ಸ್ಪರ್ಧೆ ‘ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ತರಗತಿ ವಾರು ಪ್ರಥಮ, ದ್ವಿತೀಯ, ತೃತೀಯ ಬಂದವರಿಗೆ, ₹100, 75, 50 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರದ ಕೊಡುಗೆಯನ್ನು ಹೊಂಬೆಳಕು ತಂಡದ ಸದಸ್ಯರು ನೀಡಿದರು. ಶಾಲಾವತಿಯಿಂದ 1ರಿಂದ 7ನೇ ತರಗತಿ ವರೆಗೆ ನಿಂಬೆ ಚಮಚ ಓಟ, ಲಕ್ಕಿ ಗೇಮ್, ಗ್ಲಾಸಿಗೆ ನೀರು ತುಂಬಿಸುವುದು ಸ್ಪರ್ಧೆಗಳನ್ನು ಏರ್ಪಡಿಸಿ ತರಗತಿ ವಾರು ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ಪುಸ್ತಕವನ್ನು ಬಹುಮಾನ ರೂಪವಾಗಿ ನೀಡಲಾಯಿತು.
ಶಿಕ್ಷಕ ಮಹೇಶ್ ಕೆ.ಕೆ. ಇವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರುರವರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ, ಶಿಕ್ಷಣ, ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರ, ಸಮಾಜಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಹಿರಿಯ ಶಿಕ್ಷಕಿ ವನಜಾಕ್ಷಿ ಎಂ. ಇವರು ಕಾರ್ಯಕ್ರಮ ನಿರ್ವಹಿಸಿ ನಂದರ್ಬೋಚಿತವಾಗಿ ದಿನದ ಮಹತ್ವದ ಬಗ್ಗೆ ಹಾಡು ಹಾಡಿ ಎಲ್ಲರ ಮನರಂಜಿಸಿದರು. ಅತಿಥಿ ಶಿಕ್ಷಕಿ ಸುಮನ ಹೊಂಬೆಳಕು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಜ್ಞಾನದೀಪ ಶಿಕ್ಷಕಿ ಸವಿತಾ ಇವರು ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಹೇಳಿದರು.
ವೇದಿಕೆಯಲ್ಲಿ ‘ಎಸ್ ಡಿಎಮ್ ಸಿ’ ಸದಸ್ಯ ಯುವರಾಜ ತಂಟೆಪ್ಪಾಡಿ, ವನಿತಾ ಬಾಲಕೃಷ್ಣ, ಹೊಂಬೆಳಕು ತಂಡದ ಸದಸ್ಯ ದಿನೇಶ್ ಹಾಲೆಮಜಲು, ನಿತಿನ್ ದೇರಪ್ಪಜ್ಜನಮನೆ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರಿಪ್ಪಾಡಿ ಸ್ವಾಗತಿಸಿ, ದಿನದ ವಿಶೇಷತೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರ-ಶಿಕ್ಷಣಾರ್ಥಿ ಮೋಕ್ಷ ವಂದನೆಗಳನ್ನು ಸಲ್ಲಿಸಿದರು. ಈ ದಿನ ವಿಶೇಷ ಭೋಜನ ನೀಡಲಾಯಿತು. ಮಹೇಶ್ ಕೆ.ಕೆ. ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.