ಸುಳ್ಯ: ಮೈಸೂರು ಪೊಲೀಸರ ಕಣ್ತಪ್ಪಿಸಿ ನದಿಗೆ ಹಾರಿ ಪರಾರಿಯಾಗಲೆತ್ನಿಸಿದ ಕಳ್ಳ| ಸ್ಥಳೀಯರ ಸಹಕಾರದಿಂದ ಬಂಧಿಸಿದ ಪೊಲೀಸರು

ಸುಳ್ಯ: ಇಲ್ಲಿನ ಓಡಬಾಯಿ ಸಮೀಪ ಮೈಸೂರು ಪೊಲೀಸರ ಕೈಯಿಂದ ನದಿಗೆ ಹಾರಿ ತಪ್ಪಿಸಲೆತ್ನಿಸಿದ ಕಳ್ಳನೊಬ್ಬ ಬಳಿಕ ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಭಾನುವಾರ ನಡೆದಿರುವುದು ವರದಿಯಾಗಿದೆ.

ಬ್ಯಾಂಕ್ ಖಾತೆ ಹ್ಯಾಕ್ ಮತ್ತು ಕೋಟ್ಯಾಂತರ ರೂ. ವಂಚನೆ ಮಾಡಿರುವ ಆರೋಪ ಹೊತ್ತ ಕಳ್ಳನೊಬ್ಬನನ್ನು ಮೈಸೂರು ಕ್ರೈಂ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು.

ಸುಳ್ಯ ಮಾರ್ಗವಾಗಿ ಪೊಲೀಸರು ತೆರಳುತ್ತಿದ್ದ ಸಂದರ್ಭದಲ್ಲಿ ಓಡಬಾಯಿ ಸಮೀಪ ಚಹಾ ಕುಡಿಯಲು ನಿಲ್ಲಿಸಿದ್ದು, ಈ ವೇಳೆ ಕಳ್ಳ ಕೂಡ ಇವರೊಂದಿಗೆ ಚಹಾ, ತಿಂಡಿ ಸೇರಿಸಿದ್ದಾನೆ. ಬಳಿಕ ಕೈತೊಳೆಯಲು ಹೋದ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನು ನೋಡಿದ ಸ್ಥಳೀಯರು ಜೋರಾಗಿ ಕಿರುಚಿಕೊಂಡಾಗ ಈತ ಹೋಟೆಲ್ ನ ಹಿಂದೆ ಇದ್ದ ಪಯಸ್ವಿನಿ ನದಿಗೆ ಹಾರಿ ದೊಡ್ಡೇರಿ ಕಡೆಗೆ ಓಡಿದ್ದಾನೆ.

ಬಟ್ಟೆಯಲ್ಲಿ ಕೆಸರು ನೀರು ಆಗಿರುವುದನ್ನು ಕಂಡು ಹತ್ತಿರದ ಮನೆಯವರಿಗೆ ಆತನ ಬಗ್ಗೆ ಸಂಶಯ ಬರುತ್ತದೆ. ಆತನನ್ನು ಕೆಲವು ಯುವಕರು ಆತನನ್ನು ಹಿಡಿದು ವಿಚಾರಿಸಿದಾಗ ಪೊಲೀಸರ ಕೈನಿಂದ ತಪ್ಪಿಸಿಕೊಂಡ ವಿಚಾರ ಬೆಳಕಿಗೆ ಬಂದಿದ್ದು, ಇದೇ ವೇಳೆ ಸಮಯ ಮೈಸೂರು ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.