ದಸರಾ, ನವರಾತ್ರಿ ಹಬ್ಬ ವೈಭವವನ್ನು ಸಂಕೇತಿಸುತ್ತದೆ. ಭವ್ಯವಾದ ಈ ನಾಡಲ್ಲಿ ಹತ್ತು ದಿನಗಳ ಕಾಲ ಹಬ್ಬದ ವಾತಾವರಣವನ್ನು ಸಂಭ್ರಮಿಸುವ ದಿನ. ಇದೀಗ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ, ಸಡಗರ, ಮಕ್ಕಳಿಗಂತೂ ರಜೆಯ ಮಜಾದೊಂದಿಗೆ ದಸರಾ ಹಬ್ಬವನ್ನು ಸಂಭ್ರಮಿಸುವ ಸುಯೋಗ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಒಂಭತ್ತು ದಿನಗಳ ಕಾಲವೂ ವಿಶೇಷ ಪೂಜೆ, ಪುನಃಸ್ಕಾರಗಳು ಧಾರ್ಮಿಕ ಕಾರ್ಯಕ್ರಮಗಳು, ಕಲೆ, ಸಾಂಸ್ಕೃತಿಕ ಸೊಬಗು ಮೇಳೈಸುತ್ತಿದೆ.
ಮೈಸೂರು ದಸರಾವು ನಾಡಹಬ್ಬವಾಗಿ ಪ್ರಸಿದ್ಧಿಯನ್ನು ಪಡೆದರೆ, ಮಡಿಕೇರಿ ಮತ್ತು ಮಂಗಳೂರು ದಸರಾ ಕೂಡ ತನ್ನದೇ ಐತಿಹ್ಯವನ್ನು ಹೊಂದಿದೆ. ದಸರಾ ಆರಂಭವಾಗಿ ಒಂಭತ್ತನೇ ದಿನದಲ್ಲಿ ನಾವಿದ್ದೇವೆ. ಇದೇ ದಿನ ಆಯುಧ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ದಕ್ಷಿಣ ಭಾರತದಲ್ಲಂತೂ ಆಯುಧ ಪೂಜೆಗೆ ಹೆಚ್ಚಿನ ಪಾಧನ್ಯತೆಯನ್ನು ನೀಡಲಾಗುತ್ತಿದೆ. ಈ ದಿನದಂದು ನಾವು ಕೆಲಸ ಮಾಡಲು ಬಳಸುವ ವಸ್ತುಗಳನ್ನು ಆಯುಧಗಳನ್ನು ಮತ್ತು ರಕ್ಷಾ ಕವಚಗಳನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ವಾಹನಗಳನ್ನು ಪೂಜಿಸಲಾಗುತ್ತದೆ.
ಆಯುಧ ಪೂಜೆಯನ್ನು ನವರಾತ್ರಿಯ ಕೊನೆಯ ದಿನ ಮತ್ತು ದಸರಾ ಮೊದಲು ಆಚರಿಸಲಾಗುತ್ತದೆ. ಆಯುಧ ಪೂಜೆಯು ದುರ್ಗಾ ಮಾತೆಗೆ ಸಂಬಂಧಿಸಿದ್ದು. ದಸರಾಗೂ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ಪ್ರಾಚೀನ ಕಾಲದಲ್ಲಿ ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸಿಕೊಳ್ಳುತ್ತಿದ್ದರು. ಇದರಿಂದ ಅವರು ವಿಜಯದ ವರವನ್ನು ಪಡೆಯುತ್ತಾರೆ. ಇದಲ್ಲದೆ ಪ್ರಾಚೀನ ಕಾಲದಲ್ಲಿ, ಬ್ರಾಹ್ಮಣರು ಸಹ ದಸರಾ ದಿನದಂದು ಜ್ಞಾನವನ್ನು ಪಡೆಯಲು ತಮ್ಮ ಮನೆಯಿಂದ ಹೊರಗೆ ಬರುತ್ತಿದ್ದರು ಮತ್ತು ವ್ಯಾಪಾರ ವರ್ಗದವರು ಸಹ ದಸರಾ ದಿನದಂದು ತಮ್ಮ ವ್ಯವಹಾರವನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಪರಿಗಣಿಸಿದರು. ಇದೇ ಕಾರಣಕ್ಕೆ ದಸರಾಕ್ಕೂ ಮುನ್ನ ಆಯುಧಪೂಜೆಯನ್ನು ಬಹುಮುಖ್ಯವಾಗಿ ಧಾರ್ಮಿಕತೆಯ ಮೂಲಕ ಆಚರಿಸಲಾಗುತ್ತದೆ.
ಈ ದಿನ ಎಲ್ಲಾ ಆಯುಧಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಪೂಜಿಸಲಾಗುತ್ತದೆ. ಕೆಲವು ಭಕ್ತರು ದೇವಿಯ ಆಶೀರ್ವಾದ ಪಡೆಯಲು ತಮ್ಮ ವಿಜಯದ ಸಾಧನೆಗಳನ್ನು ಅಂದರೆ ತಮ್ಮ ಸಾಧನಗಳನ್ನು ದೇವಿಯ ಮುಂದೆ ಇಡುತ್ತಾರೆ. ಚಾಕುಗಳು, ಕತ್ತರಿಗಳು, ಸಂಗೀತ ಉಪಕರಣಗಳು, ಕರಕುಶಲ ವಸ್ತುಗಳು ಮುಂತಾದ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡ ಯಂತ್ರಗಳು, ವಾಹನಗಳು, ಬಸ್ಸುಗಳನ್ನೂ ಕೂಡ ಪೂಜಿಸಲಾಗುತ್ತದೆ.
ನಮ್ಮ ಕರಾವಳಿ ಭಾಗದಲ್ಲೂ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಹಿಂದಿನ ಕಾಲದ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕಚೇರಿಗಳು, ಪೊಲೀಸ್ ಠಾಣೆ,ಅಗ್ನಿ ಶಾಮಕ ದಳ, ಅಂಗಡಿಗಳು, ಮನೆ ಮನೆಗಳಲ್ಲಿಯೂ ಕತ್ತಿ, ಹಾರೆ, ಕೃಷಿ ಸಲಕರಣೆಗಳಿಗೆ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ತಮ್ಮ ಉಪಕರಣಗಳನ್ನು ಇಟ್ಟು ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ.
ಮಹಿಷಾಸುರನನ್ನು ಸೋಲಿಸಲು ಎಲ್ಲಾ ದೇವತೆಗಳು ದುರ್ಗಾದೇವಿಗೆ ತಮ್ಮ ಆಯುಧಗಳನ್ನು ಒದಗಿಸಿದರು. ಮಹಿಷಾಸುರನಂತಹ ಶಕ್ತಿಶಾಲಿ ರಾಕ್ಷಸನನ್ನು ಸೋಲಿಸಲು, ದೇವತೆಗಳು ತಮ್ಮ ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಬೇಕಾಯಿತು. ಮಹಿಷಾಸುರನನ್ನು ಸೋಲಿಸಲು ತಾಯಿ ದುರ್ಗಾ ತನ್ನ ಹತ್ತು ಕೈಗಳಲ್ಲಿ ಆಯುಧಗಳೊಂದಿಗೆ ಹೋರಾಡಿದಳು.
ಮಹಿಷಾಸುರ ಮತ್ತು ದೇವಿಯ ನಡುವೆ ಒಂಬತ್ತು ದಿನಗಳ ಕಾಲ ಯುದ್ಧ ಮುಂದುವರೆಯಿತು. ಹತ್ತನೆಯ ದಿನ ಮಾತೆ ದುರ್ಗಾ ಮಹಿಷಾಸುರನನ್ನು ಕೊಂದಳು. ಹೀಗೆ ಎಲ್ಲಾ ಆಯುಧಗಳನ್ನು ಬಳಸಿ ಕೆಟ್ಟದ್ದನ್ನು ಸಂಹರಿಸುದ್ದನ್ನು ಗೌರವಿಸುವ ಸಮಯವೇ ವಿಜಯದಶಮಿಯಾಗಿದೆ.
ಈ ಆಯುಧಗಳನ್ನು ಸ್ವಚ್ಚಗೊಳಿಸಿ ನಂತರ ಪೂಜಿಸಲಾಯಿತು ಎನ್ನಲಾಗುತ್ತದೆ. ಇದರ ನೆನಪಿಗಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ ಎಂಬುವುದು ಪ್ರತೀತಿ.
ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.
ನವರಾತ್ರಿ ಉತ್ಸವದ ಕಡೆಯ ದಿನ ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತಿದೆ. ಹೆಸರೇ ಹೇಳುವಂತೆ ಇದು ದಶಮಿ. ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೇಯ ದಿನ.
ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮಿಸುವ ಹಬ್ಬ ದಸರಾ ಎನ್ನುವುದು ಇತಿಹಾಸದಲ್ಲಿ ಕಂಡು ಬರುವ ಉಲ್ಲೇಖವಾದರೂ, ಪುರಾಣದ ಪ್ರಕಾರ ಶಕ್ತಿ ಸ್ವರೂಪಿಣಿಯಾದ ದುರ್ಗಾಮಾತೆಯು ರಾಕ್ಷಸರನ್ನು ಸಂಹಾರ ಮಾಡಲು ಅವತಾರವೆತ್ತಿ, ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡಿ, ಶಿಷ್ಟರಿಗೆ ಜಯ ನೀಡಿದ ದಿನ ವಿಜಯದಶಮಿ.
ನಾವು ಆಚರಿಸುವಂತಹ ದಸರಾ ಹಬ್ಬಕ್ಕೆ ಪೌರಾಣಿಕೆ ಇತಿಹಾಸ ಇರುವುದರಿಂದ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಮಂಗಳೂರಿನ ಕುದ್ರೋಳಿಯಲ್ಲಿರುವ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ದಸರಾವನ್ನು ವಿನೂತನವಾಗಿ ಮಂಗಳೂರು ದಸರಾ ಮೂಲಕ ಆಚರಿಸಲಾಗುತ್ತದೆ. ನವದುರ್ಗೆಯರ ಪ್ರತಿಷ್ಠಾಪನೆ ಮೂಲಕ ಆರಂಭವಾಗಿ ಒಂಭತ್ತು ದಿನಗಳ ಕಾಲ ಒಂಭತ್ತು ದೇವಿಯರ ಆರಾಧನೆ ಮೂಲಕ ನಂತರ ವೈಭವದ ಮಂಗಳೂರಿನ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೈಸೂರು, ಮಡಿಕೇರಿ, ಇದೀಗ ಕಳೆದ ಮೂರು ವರುಷದ ಹಿಂದೆ ಆರಂಭವಾಗಿರುವ ಉಡುಪಿ ಉಚ್ಚಿಲದಲ್ಲಿಯೂ ದಸರಾ ಹಬ್ಬವನ್ನು ವೈಭವಯುತವಾಗಿ ಆಚರಿಸಲಾಗುತ್ತಿದ್ದು, ಕಲೆ, ಸಾಂಸ್ಕ್ರತಿಕತೆ ಅನಾವರಣಗೊಳ್ಳುತ್ತದೆ.
ಕಾವ್ಯ ರಾಧಾಕೃಷ್ಣ ಕೆದ್ಕಾರ್