ಜಾಲ್ಸೂರು: ಗ್ರಾಮದ ಅಡ್ಕಾರಿನಲ್ಲಿ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನ ಎಳೆದು ಪರಾರಿಯಾದ ಆರೋಪಿಯ ಆರೋಪ ಸಾಬೀತಾಗಿದ್ದು ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.
ಸಲೀಂ ಎಂಬಾತ 2022ರ ನ. 28ರಂದು ಬೆಳಗ್ಗೆ ಜಾಲ್ಸೂರು ಗ್ರಾಮದ ಬೈತಡ್ಕದಲ್ಲಿ ಕಮಲಾ ಅಡ್ಕಾರು ಆವರ ಮನೆಗೆ ದ್ವಿಚಕ್ರ ವಾಹನದಲ್ಲಿ ಬಂದು ಪರಿಚಯಸ್ಥರಂತೆ ಮಾತನಾಡಿ ಕುಡಿಯಲು ನೀರು ಕೇಳಿದ್ದ.
ಕಮಲಾ ಅವರು ನೀರು ತರಲೆಂದು ಮನೆಯೊಳಗೆ ಹೋದಾಗ ಅವರನ್ನು ಹಿಂಬಾಲಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಕೋಣೆಯಲ್ಲಿ ಕಮಲಾ ಅವರ ಕುತ್ತಿಗೆಯನ್ನು ಹಿಂದಿನಿಂದ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು, ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಜೀವ ಬೆದರಿಕೆಯೊಡ್ಡಿ ಅವರ ಕುತ್ತಿಗೆಯಲ್ಲಿದ್ದ 23.873 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದ. ಅಷ್ಟರಲ್ಲಿ ಹೋಗುವ ಸಮಯ ಚಿನ್ನದ ಸರ ಎರಡು ತುಂಡಾಗಿದ್ದು, ಅದರಲ್ಲಿ 13.23 ಗ್ರಾಂ ತೂಕದ ಚಿನ್ನವು ಮನೆಯಲ್ಲಿ ಬಿದ್ದಿದ್ದು, ಉಳಿದ ಭಾಗವನ್ನು ಆತ ತೆಗೆದುಕೊಂಡು ಪರಾರಿಯಾಗಿದ್ದ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ಸಮಕ್ಷಮ ನಡೆದು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ ಕಲಂ 386ಕ್ಕೆ 3 ವರ್ಷ ಸಾದಾ ಕಾರಾಗೃಹ ವಾಸ ಮತ್ತು 10,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ, ಕಲಂ 448ರಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ. ಈ ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದೆಂದು ಆದೇಶಿಸಲಾಗಿದೆ.
ಕೃಪೆ: ಉದಯವಾಣಿ