ಸುಳ್ಯ: ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ಹೇಳಿದರು.
ಇವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘಗಳು ಜಂಟಿಯಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿರು. ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಭಾಷೆ ರಾಜಾಶ್ರಯ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಎಲ್ಲರು ಚಿಂತನೆ ನಡೆಸಬೇಕೆಂದು ಕರೆ ಇತ್ತರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಪೇರಾಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಇವರು ವಹಿಸಿದ್ದರು. ವೇದಿಕೆಯಲ್ಲಿ ಸಂಧ್ಯಾರಶ್ಮಿ ಬಳಗದ ಪೋಷಕಾಧ್ಯಕ್ಷ ಡಾ. ಎಸ್. ರಂಗಯ್ಯ, ಕಸಾಪದ ಕೋಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ ಇವರು ಉಪಸ್ಥಿತರಿದ್ದರು. ಸಭೆಯಲ್ಲಿ ಸಿ.ಎ. ಗಣೇಶ್ ಭಟ್, ಕೇಶವ ಸಿ.ಎ., ಪ್ರೊ. ದಾಮೋದರ ಗೌಡ, ಡಾ. ಪೂವಪ್ಪ ಕಣಿಯೂರು, ಕುಮಾರಸ್ವಾಮಿ ತೆಕ್ಕುಂಜ ಪ್ರಭಾಕರ ಕಿರಿಭಾಗ, ಹೇಮಾವತಿ ದೇಂಗೋಡಿ, ಗಿರಿಜಾ ಎಮ್ ವಿ, ತೇಜಸ್ವಿನಿ ಕಿರಣ್, ಚೇತನಾ ನೇಮಿರಾಜ್, ಸುಭಾಶ್, ಸಂಧ್ಯಾ ಮಂಡೇಕೊಲು ಮತ್ತು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಲೀಲಾ ದಾಮೋದರ ಸ್ವಾಗತಿಸಿ, ಅಬ್ದುಲ್ಲಾ ಅರಂತೋಡು ವಂದಿಸಿದರು. ಕೆ.ಆರ್. ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಲಾವಿದರಿಂದ ಸುಶ್ರಾವ್ಯವಾದ ಗೀತ ಗಾಯನ ಕಾರ್ಯಕ್ರಮ ನಡೆಯಿತು.