ಮರ್ಕಂಜ: ತಾ| ಮಟ್ಟದ ‌ದಸರಾ ಕ್ರೀಡಾಕೂಟ| ದೈಹಿಕ‌ ಆರೋಗ್ಯಕ್ಕೆ ಕ್ರೀಡೆ ಸಹಕಾರಿ – ಹರೀಶ್ ಕಂಜಿಪಿಲಿ

ಮರ್ಕಂಜ.ಸೆ.22: ‘ಯುವಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಬೌದ್ಧಿಕವಾಗಿ ಹಾಗೂ ದೈಹಿಕ ಆರೋಗ್ಯವನ್ನು ಸದೃಢವಾಗಿರಿಸಲು ಸಹಕಾರಿಯಾಗುತ್ತದೆ‌. ಆದರೆ ಸಾಮಾಜಿಕ ಮಾಧ್ಯಮಗಳಿಂದ ಮೊಬೈಲ್ ಬಳಕೆಯತ್ತ ಹೆಚ್ಚು ಒಲವು ತೋರಿದ ಕಾರಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇದರಿಂದ ಆರೋಗ್ಯ ಹದಗೆಡುವ ಸಂದರ್ಭ ಬಂದಿದೆ‌‌. ಹೀಗಾಗಿ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು. ಅವರು ಸುಳ್ಯ ತಾಲೂಕು ದಸರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರೌಢಶಾಲೆ ಮರ್ಕಂಜ, ಗ್ರಾಮ ಪಂಚಾಯತ್ ಮರ್ಕಂಜ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳದ ವತಿಯಿಂದ ಸುಳ್ಯ ತಾಲೂಕು ದಸರಾ ಕ್ರೀಡಾ ಕೂಟ 2024-25 ಇಂದು ಮರ್ಕಂಜ ಪ್ರೌಢಶಾಲೆಯ ಮೈದಾನದಲ್ಲಿ‌ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮರ್ಕಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಸುಳ್ಯ ತಾಲೂಕು ಅಕ್ಷರ ದಾಸೋಹದ ಸಹಾಯಕ‌ ನಿರ್ದೇಶಕರಾದ ವೀಣಾ ಎಂ.ಟಿ. ವಹಿಸಿದ್ದರು. ‌

ವೇದಿಕೆಯಲ್ಲಿ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ ರೆಂಜಾಳ, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ದೇಲಂಪಾಡಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ, ಶ್ರೀ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಮರ್ಕಂಜ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾದ ಸುರೇಶ್ ಕಟ್ಟದಮೂಲೆ, ಮರ್ಕಂಜ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಕಾಂತ್ ಗುಳಿಗಮೂಲೆ, ಯುವಜನ ಸಂಯುಕ್ತ ಮಂಡಳಿ ಇದರ ಕಾರ್ಯದರ್ಶಿ ನಮಿತಾ ಹರ್ಲಡ್ಕ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಧನಂಜಯ ಎಂ. ಉಪಸ್ಥಿತರಿದ್ದರು. ‌

ಯುವ ಸಬಲೀಕರಣ ಕ್ರೀಡಾ ಇಲಾಖೆ ಇದರ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಸ್ವಾಗತಿಸಿದರು. ಮರ್ಕಂಜ ಪ್ರೌಢಶಾಲೆಯ ದೈಹಿಕ ಶಿಕ್ಷಕ ಹಾಗೂ ದಸರಾ ಕ್ರೀಡಾ ಕೂಟದ ಸಂಚಾಲಕ ಗಣೇಶ್ ವಂದಿಸಿದರು. ಬೆಳ್ಳಾಕೆ‌ ಕೆಪಿಎಸ್ ಬೆಳ್ಳಾರೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.