ಪಡಿತರ ಅಕ್ಕಿ ಆದ್ಯತೆಗನುಸಾರ ಸಮರ್ಪಕ ವಿತರಣೆಗೆ ಆಗ್ರಹ|ಎಸ್‌ಡಿಪಿಐ ಕಡಬ ಬ್ಲಾಕ್ ಸಮಿತಿಯಿಂದ ಆಹಾರ ನಿರೀಕ್ಷಕರಿಗೆ ಮನವಿ

ಕಡಬ ,ಸೆ. 5: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಡಬ ಬ್ಲಾಕ್ ಸಮಿತಿ ವತಿಯಿಂದ ಪಡಿತರ ಅಂಗಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸಮರ್ಪಕವಾಗಿ ವಿತರಿಸಲು ಆಗ್ರಹಿಸಿ ಕಡಬ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರಾದ ಶಂಕರ್ ರವರಿಗೆ ಮನವಿ ನೀಡಲಾಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವಿತರಿಸಲ್ಪಡುವ ಅಕ್ಕಿಯಲ್ಲಿ ಸಂಪೂರ್ಣವಾಗಿ ಕುಚ್ಚಲಕ್ಕಿ ನೀಡುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದನ್ನು ಮನಗಂಡು ಪ್ರತಿ ಕುಟುಂಬಕ್ಕೂ ನಿಗದಿಯಾದ ಅಕ್ಕಿಯ ಪ್ರಮಾಣದಲ್ಲಿ ಅರ್ಧದಷ್ಟು ಬೆಳ್ತಿಗೆ ಅಕ್ಕಿ ನೀಡಲು ಬೇಕಾಗಿ ಸಾರ್ವಜನಿಕರ ಪರವಾಗಿ ಎಸ್‌ಡಿಪಿಐ ಕಡಬ ಬ್ಲಾಕ್ ಸಮಿತಿ ನಿಯೋಗವು ಕಡಬ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಶಂಕರ್‌ರವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಮಾತನಾಡಿ ಮನವಿ ನೀಡಿದಾಗ ಮನವಿಗೆ ಸ್ಪಂದಿಸಿದ ಅಧಿಕಾರಿ ಶಂಕರ್‌ರವರು ಈ ಬಗ್ಗೆ “ಮೇಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಪರಿಹಾರ ದೊರಕಿಸಿ ಕೊಡುತ್ತೇನೆ, ಇದು ನನ್ನ ಜವಾಬ್ದಾರಿ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಡಬ ಬ್ಲಾಕ್ ಸಮಿತಿ ಅಧ್ಯಕ್ಷ ಬಶೀರ್ ಕಡಬ, ಎಸ್‌ಡಿಪಿಐ ಸುಳ್ಯ ಅಸೆಂಬ್ಲಿ ಸಮಿತಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಹಾಗೂ ಅಸೆಂಬ್ಲಿ ಸಮಿತಿ ಕಾರ್ಯದರ್ಶಿ ರಫೀಕ್ ಬೈಲು, ಕಡಬ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ ಹಾಗೂ ನಾಗರೀಕರು ಉಪಸ್ಥಿತರಿದ್ದರು.